ಭಾಗ 3. ಸ್ವರೂಪ | ರೇಲಿ ಬೈಸಿಕಲ್ಲು

Share:


ರೇಲಿ ಬೈಸಿಕಲ್ಲು!

 ಭಾಗ1. ನೆಪ್ಪು
 ಭಾಗ 2. ಅನಿಶ್ಚಿತ


ಭಾಗ 3.  ಸ್ವರೂಪ



ಗಿರೀಶನ ಮಾತನ್ನು ಕೇಳಿದ ಜನ್ನನಿಗೆ ಬೆಂಕಿಗೆ ಬಿದ್ದ ಅನುಭವವೇ ಆಗಿತ್ತು. ಚಳಿಗಾಲದಲ್ಲಿ ಬೆವರಿ ಬೆಂದು ಸುಡುತ್ತಿದ್ದ. ತಕ್ಷಣ ಚಿಂತಕನಾದ ಅವನ ಇಂದ್ರಿಯ ಎಚ್ಚೆತ್ತಿತ್ತು. ಶರವೇಗದಲ್ಲಿ ಸಾಗಿದ್ದ ತನ್ನ ಭಯ ಭಾವೋದ್ವೇಗದ ಆತುರತೆಯನ್ನು ಅಡ್ಡಗಟ್ಟಿ ನಿಲ್ಲಿಸಿ, ಒಮ್ಮೆ ದೀರ್ಘವಾಗಿ ಉಚ್ಛ್ವಸಿಸಿ, ನಶೆಯ ಅಮಲಿನಲ್ಲಿ ಹೂತುಹೋಗಿರುವ ತನ್ನ ನೆನಪನ್ನು ಹೊರತೆಗೆಯಲು ಪ್ರೇರೇಪಿಸಿತು.

ಮಸುಕು ಮಸುಕಾಗಿದ್ದ ಹಿಂದಿನ ದಿನದ ನೆನಪು ಲಘುವಾಗಿ ಸ್ಪಷ್ಟವಾದಂತೆ.

ರೋಲ್ ಹಿಡಿತು ಅಜ್ಜನ ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದ ಸಮಯಕ್ಕೆ ಹಿಂತಿರುಗಿದ. ಎರಡನೇ ಡ್ರಾಗಿಗೆ ಸೋತಿದ್ದ ಅವನ ದೇಹ ಜೀರೋ ಗ್ರಾವಿಟಿ ಕಲ್ಪನೆಯನ್ನು ವಾಸ್ತವಕ್ಕೆ ತಂದಿತ್ತು. ಗಾಳಿಯಲ್ಲಿ ತೇಲುವ ಅನುಭವ. ತನ್ನ ತೂಕವೇ ಶೂನ್ಯವಾಗಿ ಋಣಾತ್ಮಕವಾಗುತ್ತಾ ಹೋದಂತೆ.

ಅವನ ನಶೆಯ ಚಿತ್ತ ಸ್ವೇಚ್ಛೆಯ ಆಲೋಚನೆಗಳನ್ನು ಚಿತ್ರೀಕರಿಸಲು ಪ್ರಾರಂಭಿಸಿತು.

ಸಮುದ್ರ ತೀರ, ನೆಟ್ಟಿದ್ದ ಮರದ ಒಂದು ಕೊಡೆ. ಯಾವುದು ನಿಶ್ಚಿತವಲ್ಲ, ಅಪರೋಪವು ಅಲ್ಲ. ಎಂದೋ ಎಲ್ಲೋ ನೋಡಿದ ಊರು. ಎಲ್ಲಿಯದ್ದೋ ಕಥೆ. ಆಸ್ಟ್ರೇಲಿಯಾದಲ್ಲಿ ಹುಟ್ಟಿದ್ದ ಹುಲಿ ಘರ್ಜನೆಏಷ್ಯಾ ದಲ್ಲಿ ಬೆಳೆದ ಕಾಂಗರೂನ ಓಟ, ನೀರೇ ಬಂಧನವೆಂದು ತ್ಯಜಿಸಿ ಬೆನ್ನ ಹಿಂದೆ ವಾಟರ್ ಸಿಲಿಂಡರ್ನಿಂದ ಬಂದ ಪೈಪನ್ನ ಕಿವಿರುಗಳಿಗೆ ತೊಟ್ಟು  ಸ್ವಾತಂತ್ರ್ಯ ಆಚರಣೆಗೆ ನೆಲದ ಮೇಲೆ ನಡೆದು ಹೊರಟಿದ್ದ ಮೀನುಗಳು, ಮರುಭೂಮಿಯಲ್ಲಿ ಛತ್ರಿ ಹಿಡಿದು ಚಳಿಯ ಹುಡುಕಿ ಹೊರಟಿದ್ದ ಪೆಂಗ್ವಿನ್. ಎಲ್ಲವು ತರ್ಕವಲ್ಲದ ಅಸಂಭದ್ಧ ಆಲೋಚನೆಗಳು.

ತಲೆ ಎತ್ತು ಆಕಾಶ ನೋಡುತ್ತಾನೆ. ಮೈಲುಗಟ್ಟಲೆ ದೂರದಲ್ಲಿ ಮಿಂಚುಳ್ಳಿಯಂತೆ ಸಾಗಿದ್ದ ವಿಮಾನ. "ಅಲ್ಲ ಮನುಷ್ಯ ಹಾರಾಡಬೇಕ್ ಅನ್ನೋದು ದೇವ್ರ ಇಚ್ಛೆ ಆಗಿದ್ರೆ ರೆಕ್ಕೆನೆ ಕೊಡ್ತಿದ್ದ.  ವಿಮಾನ ಹಾರಾಟ ಪ್ರಕೃತಿಯ ಮತ್ತು ದೇವರ ಇಚ್ಛೆಗೆ ವಿರುದ್ಧವಾಗಿ ಗರ್ವದಿಂದ ತಲೆಯೆತ್ತಿ ನಿಂತಿರೋ ಆವಿಷ್ಕಾರ! ಇದ್ನ ಅಳಿಸಿ ಹಾಕ್ಬೇಕ್"

ತನ್ನ ನಿಯಂತ್ರಣಕ್ಕೆ ಸಿಗದಿದ್ದ ಕೈ ಕಾಲುಗಳು ಕಾರನ್ನು ತಾನಾಗಿಯೇ ಚಲಾಯಿಸತೊಡಗಿದ್ದವುತನ್ನ ಅಜ್ಜನ ಆಕಾರವೊಂದು ತನ್ನ ಪಕ್ಕದಲ್ಲಿಯೇ ಕುಳಿತಂತೆ. ಧಮ್ಮಿನ ನಶೆ ಸತ್ತ ಅಜ್ಜನನ್ನೇ ಕರೆಸಿ ಕೂರಿಸಿತ್ತು.

"ಒಬ್ನೇ ಎಲೈಟಿದ್ಯಲ್ಲೋ ಮೊಮ್ಮಗನೇ. ನಂಗಿಲ್ವಾ?" ಅವನ ಒಂಟಿತನ ನಶೆಯಲ್ಲಿ ಅಜ್ಜನನ್ನು ಸೃಷ್ಟಿಸಿ ಇವನ ಬಳಿಯೇ ಸಂಭಾಷಿಸಿತ್ತು.

"ಅಲವ, ನನ್ನ ಸೈಕಲ್ ಮಾರ್ತೀನಿ ಅಂತ ಕುಥಾವ್ನ್ ನಂಗ್ ಹುಟ್ಟಿರೋ ಆ ಕೆಟ್ಟ ಹುಳ. ಬೇಡ ಅಂತ ತಡಿಯೋದಲ್ಲೇನು ನೀನು?"

ಗಾಡಿ ಚಲಿಸುತ್ತಲೇ ಇದೆ. ತನ್ನ ತಲೆಯಲ್ಲಿದ್ದ ಆಲೋಚನೆಯನ್ನೇ ಅಜ್ಜನ ಆಕಾರವೊಂದು ಹೇಳಿದಂತೆ ಭ್ರಮಿಸಿಕೊಳ್ಳುತ್ತ ಜನ್ನ ಗಾಡಿಯನ್ನು ಸಮಾನಾಂತರ ಚಿತ್ತದಲ್ಲಿ ಚಲಾಯಿಸುತ್ತಿದ್ದಾನೆ. ಅಜ್ಜನ ಸ್ವರೂಪವೆಂದು ಇವನು ನಂಬಿದ್ದ ಸೈಕಲ್ಲಿನ ಮಾರಾಟ ವಿಷಯದ ತನ್ನ ಅಭಿಪ್ರಾಯವನ್ನು ಅಜ್ಜನ ಆಕೃತಿಯ ಮೂಲಕ ಹೊರಹಾಕುತ್ತಾನೆ.

"ನಾನು ಇದ್ದಾಗ್ಲೇ ಆ ಸೈಕಲ್ ನಿಂಗ್ ವಹಿಸಬೇಕಿತ್ತು!" ಮತ್ತೆ ಇವನದ್ದೇ ಅಭಿಪ್ರಾಯ ಅಜ್ಜನ ಆಕೃತಿ ಹೇಳಿತ್ತು.

ಜನ್ನ ತನ್ನ ಆಲೋಚನೆ ಏರಿಳಿತದಂತೆ ಕಾರಿನ ಅಕ್ಸೆಲೆರೇಟರನ್ನು ಒತ್ತಿ ಚೋದಿಸಿದ್ದ. ಕಾಕತಾಳೀಯವೆಂಬಂತೆ ತನ್ನ ಮಾವನ ಖಾಲಿ ಗಾಡಿ ಬೀದಿಬದಿಯಲ್ಲಿ ನಿಂತಿದ್ದಿ ಕಂಡಿತ್ತು. ನಶೆಯಲ್ಲಿ ಏನು ಚಿಂತಿಸದೆ ಸ್ಟಿಯರಿಂಗ್ ತಿರುಗಿಸಿ ತಗುಲಿಸಿಯೇ ಮುನ್ನಡೆಸಿದ್ದ.


ಮತ್ತೆ ಅವನ ಪ್ರಜ್ಞೆ ಹಿಡಿತಕ್ಕೆ ಸಿಗುವಷ್ಟರಲ್ಲಿ ಗಾಡಿ ಅಜ್ಜನ ಅಂಗಡಿಯ ಬದಿ ನಿಂತಿತ್ತು.

ಮಾವನ ಆಪ್ತ ಸ್ನೇಹಿತ ರಂಗನಾಥನ ಮನೆಯೆದುರು ಖಾಲಿ ನಿಂತಿದ್ದ ಗಾಡಿಯನ್ನು ಬೀಳಿಸಿದ್ದು ಬಿಟ್ಟರೆ, ಜನ್ನನಿಗೆ ಮತ್ತೇನು ನೆನಪಿಗೆ ಬರಲಿಲ್ಲ! ಮತ್ತೊಮ್ಮೆ ಮಗದೊಮ್ಮೆ ಮೂರ್ನಾಲ್ಕು ಬಾರಿ ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದರೂ, ಅಷ್ಟು ಬಿಟ್ಟು ಬೇರೇನೂ ನಡೆದಂತೆ ಜನ್ನನಿಗೆ ತೋರುವುದುಲ್ಲ. ಅಷ್ಟಾದರೂ ನಶೆಯ ನೆನಪನ್ನು ನಂಬುವ ಸ್ಥಿತಿಯಲ್ಲಿ ಅವನು ಇರಲಿಲ್ಲ.

ಸಮಯ ಇನ್ನು ನಾಲ್ಕೂಮುಕ್ಕಾಲು. ಮಾವನ ಕೊಲೆಯ ವರ್ತಮಾನದ ಆದಷ್ಟು ವಿಷಯವನ್ನು ತಿಳಿದುಕೊಂಡರೆ, ತನಗಿದ್ದ ಗೊಂದಲ ಪರಿಹಾರವಾಗಬಹುದೆಂದು ತೀರ್ಮಾನಿಸುತ್ತಾನೆ. ಅಷ್ಟರಲ್ಲಿ ತನ್ನ ಮನೆ ಪಕ್ಕದ ಹುಡುಗ ಗೋಪಿ ತರಾತುರಿಯಲ್ಲಿ ತನ್ನ ತೋಟದ ಮನೆಯ ಕಡೆ  ಹೊರಟಿದ್ದವನು ಜನ್ನನನ್ನು ಕಂಡು ನಿಂತ.

"ಇದೇನು ಜನ್ನಣ್ಣ ಇಷ್ಟೊತ್ತಲ್ಲಿ ಇಲ್ಲಿ. ನೀವ್ ಸಿಕ್ಕಿದ್ದು ಒಳ್ಳೇದೇ ಆಯಿತು. ನಾನೆ ಬಂದು ಪುಟ್ಟು ಮಾಡಿದ್ ಅವಾಂತರ ನಿಮಗೆ ಹೇಳೋಣ ಅಂತಿದ್ದೆ!"

"ಅದೇನ್ ಮಾಡಿದ್ನೋ ಅವ್ನು!"

"ನೆನ್ನೆ ನೀವೇ ನನ್ನ ಹತ್ರ ರಾಮಾಯಣ ಕೇಳೋಕ್ ಕಳ್ಸಿದ್ರಲ್ಲ. ಕಥೆ ಹೇಳ್ತಿದ್ದೆ. ಅವನು ಕೇಳ್ತಿದ್ ಪ್ರಶ್ನೆ ನೋಡುದ್ರೆ ಕಥೆನೇ ನಿಜ ಅಂತ ನಂಬ್ಕೊಂಡ್ ಕೂತಿದ್ದ. ಒಂದ್ ಮಜಾ ತೊಗೊಳೋಣ ಅಂತ ಒಂದ್ ತರ್ಲೆ ಮಾಡ್ಬಿಟ್ಟೆ"

"ಏನ್ ಮಾಡ್ದೆ ಮಾರಾಯ"

"ರಾತ್ರೆ, ತೋಟದ್ ಮನೆಗೆ ಕರ್ಕೊಂಡ್ ಹೋಗಿ, ರೂಮ್ನಲ್ಲಿ ನಿಲ್ಸಿ, ಇದರ ಸುತ್ತ ಲಕ್ಷ್ಮಣ ರೇಖೆ ಎಳ್ದಿದ್ದೀನಿ . ಆಚೆ ಹೋದ್ರೆ ಸಾಯ್ತಿಯ ಅಂದ್ಬಿಟ್ಟೆ. ಒಳಗೆ ಅಳ್ಕೊಂಡೆ ಕೂತಿದ್ದ. ನಂಗೆ ಇವಾಗ ಭಯ ಆಗ್ತಿದೆ. ರಾತ್ರಿ ಪೂರಾ ಅಲ್ಲೇ ಉಳ್ಕೊಂಡ್ನ ಅಂತ!"

ಹದಿನೈದು ವರ್ಷ ಆಗಿದ್ದರು ಹುಡುಗಾಟಿಕೆಯಲ್ಲೇ ನಡೆದಿದ್ದ ಗೋಪಿಯ ಮಾತನ್ನು ಕೇಳಿ ಕೆಟ್ಟ ಕೋಪ ಬಂದಿದ್ದು ಜನ್ನನಿಗೆ.

"ನಿಂಗೇನ್ ತಲೆ ಕೆಟ್ಟಿದ್ಯಾ? ಪುಟ್ಟ ಹುಡ್ಗನ್ ಜೊತೆ ನಿಂದೇನ್ ಆಟ!"

"ಹಂಗಲ್ಲ ಅಣ್ಣ. ನೆನ್ನೆ ಎಲ್ಲ ಶನಿವಾರದ್ ತರಾನೇ, ನಮ್ ತೋಟದ್ ಮನೆಗೆ ಕರ್ಕೊಂಡ್ ಹೋಗಿ ಅವ್ನಿಗೆ ಕಥೆ ಹೇಳ್ತಿದ್ನ. ಲಕ್ಷ್ಮಣ ಶೂರ್ಪನಕಿ ತಪ್ಪು ಮಾಡಿದ್ದಕ್ಕೆ ಮೂಗು ಕುಯ್ದ ಅಂದ್ರೆ, ಸೈಕಲ್ ಅಜ್ಜನ ಮಗ ಬೆಲ್ಲು ಹೊಡ್ಯಕ್ಕೆ ಬಿಡದೆ ಇಲ್ಲ. ಅದು ತಪ್ಪು ತಾನೇ. ನಾನು ಅವ್ನ್ ಮೂಗು ಕುಯ್ದು ಹಾಕ್ತಿನಿ ಅಂತ ಅಲ್ಲಿದ್ದ ಚೂರಿ ಎತ್ಕೊಂಡ್ ನಿಂತಿದ್ದ! ಹೇಗೂ ಕಥೇನ ನಂಬಿದ್ನಲ್ಲ ಒಂದ್ ರಾತ್ರಿ ಇಲ್ಲೇ ಇರ್ಲಿ ಅಂತ ಹಾಗೆ ಮಾಡ್ದೆ."

ಇದನ್ನಾಲಿಸಿದ ಜನ್ನನಿಗೆ ಒಮ್ಮೆಲೇ ದಿಗ್ಭ್ರಮೆಯಾಯಿತು. ತಾನು ನಶೆಯಲ್ಲಿ ಮಾಡಿರಬಹುದೆಂದು ಅನುಮಾನಿಸಿದ್ದ ಊಹೆಯೆಲ್ಲ ನಶಿಸಿ, ಅನುಮಾನವೆಲ್ಲ ಹುಡುಗನ  ಮೇಲೆ ನಿಂತಿತು. ಹುಡುಗ ಕೊಲೆ ಮಾಡಿರಲಾರ ಎಂದು ಅವನ ಮನಸ್ಸು ಹೇಳುತ್ತಿದ್ದರು, ತಾನು ಪರಿಸ್ಥಿತಿಯಲ್ಲಿ ಸಿಕ್ಕಿಕೊಳ್ಳಬಹುದಾದ ಸಂಭವ ಇದ್ದುದರಿಂದ, ತಾತ್ಕಾಲಿಕ ಶಾಂತಿಗಾಗಿ ಹುಡುಗನೇ ತಪ್ಪಿತಸ್ಥ ಎಂದು ತನಗೆ ತಾನೇ ನಂಬಿಸತೊಡಗಿದ್ದ.

ಗೋಪಿಗೆ ಶ್ರೀಹರಿಯ ಸಾವಿನ ವರ್ತಮಾನ ತಿಳಿದಿರದ ಕಾರಣ ಅವನ ಗಾಬರಿಗೆ ಮೂಲ "ಪುಟ್ಟ ಏನ್ ಮಾಡ್ತಿದ್ದನೊ ಎಂಬುದಷ್ಟೇ ಆಗಿತ್ತು"

"ಅಣ್ಣ, ನಾನು ಹೋಗಿ ನೋಡ್ತೀನಿ. ಅದೇನ್ ಮಾಡ್ತಿದ್ದಾನೋ. ಪಾಪ ಊಟ ಬೇರೆ ಆಗಿರ್ಲಿಲ್ಲ."
"ನಾನು ಬರ್ತೀನಿ ನಡಿ. ನಂಗೂ ನೋಡೋದ್ ಇದೆ ಅವ್ನ"
ಇಬ್ಬರು ತೋಟದ ಮನೆಯ ಕಡೆ ಹೊರಟರು. 



No comments